Monday, February 15, 2021

 ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ

ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿಜಯನಗರ ಜಿಲ್ಲೆ.


ಸಂತ ಶ್ರೀ ಸೇವಾಲಾಲ್ ಮಹಾರಾಜರ ೨೮೨ನೇ ಜಯಂತಿ 

ದಿನಾಂಕ: ೧೫.೦೨.೨೦೨೧

         ಇಂದು ದಿನಾಂಕ: ೧೫.೦೨.೨೦೨೧ ಇಡೀ ಲಂಬಾಣಿ ಸಮುದಾಯ ಹೆಮ್ಮೆ ಪಡುವ ಸುದಿನ ಏಕೆಂದರೆ ಬಂಜಾರ ಸಮುದಾಯದ ಸಮಾಜ ಸುಧಾರಕ ಆದಿಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜನ್ಮದಿನ. ಈ ದಿನವನ್ನು ಸೇವಾಲಾಲ್‌ರನ್ನು ದೈವಸಂಭೂತನಾಗಿ ಎಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಕ್ರಿ.ಶ ೧೨ ನೇ ಶತಮಾನದ ಶರಣ ಚಳುವಳಿಯ ನಂತರ ಸೂಫಿಗಳು, ನಾಥಪಂಥ, ವಿರಕ್ತರು, ಆರೂಢರು ಕಂಡುಬರುತ್ತಾರೆ. ಇವರ ನಂತರದಲ್ಲಿ ಕೊಡೆಕಲ್ ಬಸವಣ್ಣ, ಮೊನಪ್ಪಯ್ಯ, ಫಕ್ಕೀರೇಶ, ಮಂಟೆಸ್ವಾಮಿ, ಮಾದೇಶ್ವರರ ಮೊದಲಾದ ಸಂತರು ಆಗಿಹೊಗಿದ್ದಾರೆ.  ಈ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಾಹಾಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರಾಗಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್) ಎಂಬ ಗ್ರಾಮದಲ್ಲಿ ಫೆಬ್ರವರಿ ೧೫ ೧೭೩೯ ರಲ್ಲಿ ಜನಿಸಿದರು. ಇವರ ಜನನದಿಂದ ಸಾವಿರಾರು ವರ್ಷಗಳಿಂದ ಅಲೆಮಾರಿಗಳಾಗಿ, ಅಜ್ಞಾನ, ಅಂಧಕಾರದ ಜೀವನ ಸಾಗಿಸುತಿದ್ದ ಬಂಜಾರ ಸಮುದಾಯದ ಮಾರ್ಗದರ್ಶಕರಾದವರು. ಇಂತಹ ಮಹಾಪುರುಷರು ಶರಣರು ಕಂಡ ಸಮಸಮಾಜದ ಚಿಂತನೆಯ ಪರಿಪಾಲಕರಾಗಿದ್ದರು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ, ತತ್ವ ಆದರ್ಶಗಳ ಅಡಿಯಲ್ಲಿ ಬದುಕನ್ನು ನಡೆಸುವಂತೆ ಜನರಿಗೆ ಮಾರ್ಗದರ್ಶನ ನೀಡಿದವರು. 

ಸಮಾಜಮುಖಿ ಕಾರ್ಯಗಳೇ ಇವರ ದೈವತ್ವಕ್ಕೆ ಹಾಗೂ ಪವಾಡ ಪುರುಷನಾಗಿ ಪೂಜಿಸಲ್ಪಟ್ಟವರು.  ಈ ಪವಾಡಗಳ ಉದ್ದೇಶವೇ ಸಮೂದಾಯದ ಉದ್ದಾರ  ಹಾಗೂ ಸಮಾಜವನ್ನು ತಿದ್ದುವುದರ ಜೊತೆಗೆ ಅಸಮಾನತೆಯನ್ನು ಹೋಗಲಾಡಿಸಿ ಮಾಹಾತ್ಮರ ತತ್ವ ಆದರ್ಶಗಳಡಿಯಲ್ಲಿ ಬದುಕನ್ನು ನಡೆಸುವಂತೆ ಜನರಿಗೆ ತಿಳಿ ಹೇಳಿದರು. ಎಲ್ಲಾ ವರ್ಗದವರನ್ನು ಪ್ರೀತಿಸುವ, ಸಹಕರಿಸುವ ಮನೋಭಾವವು ಸಂತ ಶ್ರೀ ಸೇವಾಲಾಲ್ ಮಹಾರಾಜರ ಉದ್ದೇಶವಾಗಿತ್ತು.

 ಜನರು ಸನ್ಮಾರ್ಗದಲ್ಲಿ ನಡೆಯಲು ತತ್ವಗಳನ್ನು ಹೇಳಿದರು:

೧. ಸುಳ್ಳನ್ನು ಹೇಳಬಾರದು.

೨. ಪ್ರಾಣಿ ಹಿಂಸೆ ಮಾಡಬಾರದು (ಅಹಿಂಸ ಪ್ರತಿಪಾದಕರಾಗಿದ್ದರು).

೩. ಕಾಯಕದ ಮಹತ್ವವನ್ನು ಸಾರಿದರು.

೪. ದುಃಖದಲ್ಲಿ ಇರುವವರನ್ನು ಕಾಪಾಡುವುದು.

೫. ಪ್ರೀತಿ ಸಹಕಾರ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದು.

ಎಂಬ ಅಂಶಗಳನ್ನು ಹೇಳುವುದರ ಮೂಲಕ ಎಲ್ಲಾ ಸಮುದಾಯದ ಜನಮಾನಸದಲ್ಲಿ  ಆದರ್ಶಪುರುಷನಾಗಿ ಸಂತ ಶ್ರೀ ಸೇವಾಲಾಲ್‌ರು ನೆಲೆನಿಲ್ಲುತ್ತಾರೆ. ಇಂತಹ ಮಾಹಾನ್ ಮಾನವತವಾದಿಯ ತತ್ವ, ಆದರ್ಶ ಮತ್ತು ಚಿಂತನೆಗಳ ನೆಲೆಯಲ್ಲಿ ಎಲ್ಲಾ ಸಮುದಾಯಗಳು ಸಾಗಬೇಕಾಗಿದೆ. 



















No comments:

Post a Comment

ದಿನಾಂಕ: ೦೪.೦೭.೨೦೨೨ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಸಹಾಯಕರ ತರಬೇತಿ ಕಾರ್ಯಾಗಾರ (ಬಂಜಾರ ಸಾಂಸ್ಕೃತಿಕ ಪದ ವಿವರಣಾಕೋಶ)ವನ್ನು ಮಾನ್ಯ ಕುಲಪತಿಗ...